ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ನಟಿ ರನ್ಯಾ ರಾವ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಒಂದು ವರ್ಷಗಳ ಕಲ ಜೈಲಿನಲ್ಲಿದ್ದ ರನ್ಯಾ ರಾವ್ ಗೆ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಅತ್ಯಂತ ಕಠಿಣವಾದ COFEPOSA) ಕಾಯ್ದೆಯಡಿ ವಿಧಿಸಲಾಗಿದ್ದ ಬಂಧನದ ಅವಧಿ ಇಂದಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ, ನಟಿ ಇಂದು ಸಂಜೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಕಳೆದ 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿಯೇ ಸುತ್ತುವರಿದಿದ್ದರು. ತಪಾಸಣೆಯ ವೇಳೆ ಅವರ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 14.2 ಕೆಜಿ ತೂಕದ ಚಿನ್ನದ ಬಾರ್ಗಳು ಪತ್ತೆಯಾಗಿದ್ದವು. ಈ ಸ್ಫೋಟಕ ಮಾಹಿತಿಯ ಬೆನ್ನಲ್ಲೇ ಅಧಿಕಾರಿಗಳು ಮಾರ್ಚ್ 4ರಂದು ನಟಿಯನ್ನು ಬಂಧಿಸಿ ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ವಿಚಾರಣೆಯ ವೇಳೆ ಈ ಜಾಲದ ಹಿಂದೆ ಆಭರಣ ವ್ಯಾಪಾರಿ ಸಾಹಿಲ್ ಜೈನ್ ಹಾಗೂ ತರುಣ್ ಕೊಂಡೂರು ರಾಜು ಎಂಬುವವರ ಭಾಗೀದಾರಿಕೆ ಇರುವುದು ಪತ್ತೆಯಾಗಿ, ಇಡೀ ಅಂತರರಾಷ್ಟ್ರೀಯ ಸ್ಮಗ್ಲಿಂಗ್ ಜಾಲದ ಮುಖವಾಡ ಕಳಚಿಬಿದ್ದಿತ್ತು.


