ಬೆಂಗಳೂರು: ಐಪಿಎಲ್ ಟಿಕೆಟ್ ಕೊಡಿಸುವಂತೆ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಬೇಡಿಕೆ ಇಟ್ಟಿದ್ದಾರೆ.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದು, ಶಾಸಕರ ಕುಟುಂಬಕ್ಕೆ ಐದು ಟಿಕೆಟ್ ಕೊಡುವಂತೆ ಆಗ್ರಹಿಸಿದ್ದಾರೆ.
ಶಾಸಕರಿಗೆ ಒಂದು ಟಿಕೆಟ್ ಕೊಡುತ್ತಿದ್ದು, ಮನೆಯವರನ್ನೆಲ್ಲಾ ಕರೆದುಕೊಂಡು ಹೋಗುವುದು ಹೇಗೆ, ಒಂದು ಟಿಕೆಟ್ ಗೆ ಐದು ಸಾವಿರದಿಂದ 20 ಸಾವಿರದವರೆಗೆ ಇದೆ, ಜನಸಾಮಾನ್ಯರ ಜೊತೆ ಹೋಗಿ ನಾವೂ ಕ್ಯೂ ನಲ್ಲಿ ನಿಲ್ಲಬೇಕಾ? ಎಂದು ಸದನದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಶಾಸಕರಿಗೆ ನಾಲ್ಕು ಟಿಕೆಟ್ ನೀಡಲು ತಿಳಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಸೂಚಿಸಿದ ಸ್ಪೀಕರ್ ಯು.ಟಿ. ಖಾದರ್, ಐಪಿಎಲ್ ಟಿಕೆಟ್ ಗಾಗಿ ನನ್ನ ಬಳಿ ಬರಬೇಡಿ, ಡಿ.ಕೆ. ಶಿವಕುಮಾರ್ ಬಳಿ ಹೋಗಿ ಎಂದು ಸದನದಲ್ಲಿ ಶಾಸಕರಿಗೆ ಸ್ಪೀಕರ್ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರವನ್ನು ಶಾಸಕರು ಒತ್ತಾಯಿಸಿದ್ದು, ಕೆಎಸ್ ಸಿಎ ಅಧ್ಯಕ್ಷರನ್ನು ಕರೆದು ಮಾತನಾಡುವುದಾಗಿ ಸದನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.


