ಮೂಡುಬಿದಿರೆ: ಮಹಿಳೆಯೋರ್ವರು ತಲೆಗೆ ಏಟು ಬಿದ್ದ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕರಿಯಾಗದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದು ಇದು ಸಂಶಯಾಸ್ಪದ ಸಾವು ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಪುತ್ತಿಗೆ ವಿದ್ಯಾಗಿರಿಯ ನಿವಾಸಿ ದಿನೇಶ್ ಎಂಬವರ ಪತ್ನಿ ಸವಿತಾ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮಹಿಳೆ ಎಂದು ತಿಳಿದು ಬಂದಿದೆ.
ಸವಿತಾ ಅವರಿಗೆ ಎರಡು ದಿನಗಳ ಹಿಂದೆ ತಲೆಗೆ ಏಟು ಬಿದ್ದಿದ್ದು, ಗಂಭೀರವಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಆಕೆಯ ಗಂಡ ದಿನೇಶ್ ಪ್ರತಿದಿನ ಆಕೆಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗುತ್ತಿದ್ದು ಸವಿತಾ ಅವರ ಸಾವಿಗೆ ಆತನೇ ಕಾರಣ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆಕೆಯ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು ತಾಯಿ ಬಿದ್ದು ಗಂಭೀರ ಗಾಯಗೊಂಡಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಒಟ್ಟಾರೆಯಾಗಿ ಈ ಸಾವಿನ ಬಗ್ಗೆ ಸವಿತಾ ಅವರ ಸಂಬಂಧಿಕರು ಮತ್ತು ಮನೆಯ ಸಮೀಪದವರು ಸಂಶಯ ವ್ಯಕ್ತ ಪಡಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


