ಬೆಳ್ತಂಗಡಿ : ತುರ್ತು ಸೇವೆಗಾಗಿ ಹೋಗುತ್ತಿದ್ದ ಪಶು ಇಲಾಖೆಯ ವಾಹನದ ಚಾಲಕನ ಮೇಲೆ ಕ್ಷುಲ್ಲಕ ವಿಚಾರದಲ್ಲಿ ಆಂಬ್ಯುಲೆನ್ಸ್ ಬಾಗಿಲು ತೆಗೆದು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ಮಾಡಿದ ಘಟನೆ ಇಂದು ಬೆಳ್ತಂಗಡಿಯಲ್ಲಿ ನಡೆದಿತ್ತು. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ದಂಪತಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕಿನ ನೆರಿಯಕ್ಕೆ ತುರ್ತು ಸೇವೆಯಲ್ಲಿ ತೆರಳುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಲಾಯಿಲ ಜಂಕ್ಷನ್ ನಲ್ಲಿ ದಾರಿ ಬಿಡುವ ವಿಚಾರಕ್ಕೆ ಕಾರು ಚಾಲಕ ಪತಿ ಶರತ್ ಮತ್ತು ಪತ್ನಿ ಶೃತಿ ಇಬ್ಬರು ಸೇರಿ ಹಿಗಾಮುಗ್ಗಾ ಥಳಿಸಿದ ಘಟನೆ ಬೆಳ್ತಂಗಡಿಯ ಲಾಯಿಲ ಜಂಕ್ಷನ್ ನಲ್ಲಿ ಮಾ.12 ರಂದು ನಡೆದಿದೆ.
*ಹಲ್ಲೆ ಮಾಡಿದ ದಂಪತಿ :*ಹಲ್ಲೆ ಮಾಡಿದ ಕಾರಿನ ಚಾಲಕ ಬೆಂಗಳೂರಿನ ಮಲ್ಲೇಶ್ವರಂನ ನಿವಾಸಿ HDFC ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿರುವ ಶರತ್(40) ಮತ್ತು ಆತನ ಪತ್ನಿ ಶೃತಿ(34) ಎಂದು ಗುರುತಿಸಲಾಗಿದೆ. ಗಂಡ,ಹೆಂಡತಿ ,ಗಂಡು ಮಗು ಮತ್ತು ಶೃತಿ ತಾಯಿ ಸೇರಿ ಒಟ್ಟು ನಾಲ್ಕು ಜನ ವಿವಿಧ ದೇವಾಲಯಗಳಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಇನ್ನೂ ಇನ್ಸೂರೆನ್ಸ್ ಇಲ್ಲದ ಕಾರು ಮತ್ತು ಹಲ್ಲೆ ಮಾಡಿದ ಶರತ್ ಮತ್ತು ಶೃತಿಯನ್ನು ಬೆಳ್ತಂಗಡಿ ಪೊಲೀಸ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಅಂಬುಲೆನ್ಸ್ ಚಾಲಕ ರಕ್ಷಿತ್ ಕುಮಾರ್ ನೀಡಿದ ದೂರಿನ ಮೇರೆಗೆ ಕಾರು ಚಾಲಕ ಶರತ್ ಮತ್ತು ಪತ್ನಿ ಶೃತಿ ವಿರುದ್ಧ 504,341,323,427 ಜೊತೆಗೆ 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬೆಳ್ತಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.