ಬಂಟ್ವಾಳ: ನಾವೂರು ಗ್ರಾಮದ ಮಣಿಹಳ್ಳ ಎಂಬಲ್ಲಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಲಾರಿ ಚಾಲಕರು ಹಾಗೂ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಟಿಪ್ಪರ್ ಚಾಲಕ ಕಂ ಮಾಲಕ ತೆಂಕಕಜೆಕಾರು ಗ್ರಾಮ, ಬಂಟ್ವಾಳ ನಿವಾಸಿ ಮಿಥುನ್, ಟಿಪ್ಪರ್ ಮಾಲಕರಾದ ಅನಿಶ್ ಹಾಗೂ ಪ್ರಜ್ವಲ್ ಶೆಟ್ಟಿ ಅವರನ್ನು ಮರಳು ಕಳವು ಹಾಗೂ ಅಕ್ರಮ ಸಾಗಾಟದ ಆರೋಪಿಗಳೆಂದು ಹೆಸರಿಸಲಾಗಿದೆ.
ಈ ಮರಳು ಕಳವು ಪ್ರಕರಣವು ಶನಿವಾರದಂದು ರಾತ್ರಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ ಬಿ ಅವರ ನೇತೃತ್ವದ ಪೊಲೀಸರು ಎರಡು ಟಿಪ್ಪರ್ ಲಾರಿಗಳನ್ನು ತಡೆದು ತಪಾಸಣೆ ನಡೆಸಿದಾಗ ಬೆಳಕಿಗೆ ಬಂದಿದೆ. ಮರಳನ್ನು ಅರ್ಕುಳ ಗ್ರಾಮದ ವಳಚ್ಚಿಲ್ ಎಂಬಲ್ಲಿನ ನೇತ್ರಾವತಿ ಹೊಳೆಯಿಂದ ಕಳವು ಮಾಡಿದ್ದಾರೆ. ಇನ್ನು ಅಕ್ರಮ ಸಾಗಾಟ ಮಾಡುವ ಬಗ್ಗೆ ಚಾಲಕ ಹಾಗೂ ಮಾಲಕರು ಒಪ್ಪಿಕೊಂಡಿದ್ದು, ಮರಳು ಸಹಿತ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ: 26/2024 ಕಲಂ 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.