ಮಂಗಳೂರು: ನಗರದ ಪ್ರತಿಷ್ಠಿತ ಶ್ರೀನಿವಾಸ ಕಾಲೇಜಿನಲ್ಲಿ ಮೊದಲ ವರ್ಷದ ಬಿ ಫಾರ್ಮಾ ವ್ಯಾಸಂಗ ಮಾಡುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗೆ ರ್ಯಾಗಿಂಗ್ ಮಾಡಿದ ಆರೋಪದಲ್ಲಿ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ.
ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ನಡೆದಿದ್ದು, ಎಲ್ಲರೂ ಕೇರಳ ಮೂಲದವರು ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.10ರಂದು ಮಧ್ಯಾಹ್ನ ತರಗತಿ ಮುಗಿಸಿ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ಕೇರಳ ಮೂಲದ, ಪ್ರಥಮ ವರ್ಷದ ಬಿ-ಫಾರ್ಮಾ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆದು ಬರುವಂತೆ ಹಿರಿಯ ವಿದ್ಯಾರ್ಥಿಗಳು ಒತ್ತಡ ಹೇರಿದ್ದಲ್ಲದೆ, ಹಿರಿಯ ವಿದ್ಯಾರ್ಥಿಗಳ ಮಾತು ಕೇಳದ ಪ್ರಥಮ ವರ್ಷದ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿತ್ತು.
ಈ ಬಗ್ಗೆ ವಿದ್ಯಾರ್ಥಿ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರ್ನಾಟಕ ಎಜುಕೇಶನ್ ಆಯಕ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೃತೀಯ ಬಿ ಫಾರ್ಮಾದ ಜಿಷ್ಣು(20), ಶ್ರೀಕಾಂತ ಪಿ.ವಿ.(20), ಅಶ್ವಂತ್(20), ಸಯಂತ್(22), ಅಭಿರತ್ ರಾಜೀವ್(21), ದ್ವಿತೀಯ ಬಿ ಫಾರ್ಮಾದ ರಾಹುಲ್ ಪಿ.(21), ಜಿಷ್ಣು (20), ಮುಖ್ತಾರ್ ಅಲಿ(19), ಮುಹಮ್ಮದ್ ರಝೀಮ್ ಕೆ.(20) ಬಂಧಿತರು.
ರಾಗಿಂಗ್ ಗೆ ಒಳಗಾದ ಪ್ರಥಮ ವರ್ಷದ ವಿದ್ಯಾರ್ಥಿ ಪಾಲಕರು ಡಿಸಿಪಿಗೆ ಕರೆ ಮಾಡಿ, ತಮ್ಮ ಮಗ ಏಕಾಏಕಿ ಕಾಲೇಜು ಬಿಟ್ಟು ಬಂದಿದ್ದು ಮತ್ತೆ ಹೋಗಲು ಹಿಂಜರಿಯುತ್ತಿದ್ದಾನೆ. ಆತನ ಹಾಸ್ಟೆಲ್ ಶಿಕ್ಷಣಕ್ಕಾಗಿ ಪಾವತಿಸಿರುವ 2 ಲಕ್ಷ ರೂ. ವಾಪಸ್ ಕೊಡಿಸುವಲ್ಲಿ ಸಹಕರಿಸುವಂತೆ ವಿನಂತಿಸಿದ್ದರು. ಮಾಹಿತಿ ಕಲೆ ಹಾಕಿದಾಗ, ವಿದ್ಯಾರ್ಥಿಗೆ 5-6 ದಿನಗಳ ಕಾಲ ರ್ಯಾಗಿಂಗ್ ನಡೆಸಿರುವುದು ತಿಳಿದುಬಂದಿದೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.