ಚೆನ್ನೈ: ಉಡುಪಿಯಲ್ಲಿರುವ ಉದ್ಯಮಿ ಅದಾನಿ ಒಡೆತನದ ಯುಪಿಸಿಎಲ್ ಗೆ ರಾಷ್ಟ್ರೀಯ ಹಸಿರು ಪೀಠ 52 ಕೋಟಿ ರೂಪಾಯಿ ದಂಡ ವಿಧಿಸಿದೆ.
ನಂದಿಕೂರು ಜನಜಾಗೃತಿ ಸಮಿತಿ 2005ರಲ್ಲಿ ಹೊಡಿದ್ದ ದಾವೆಯ ವಿಚಾರಣೆ ನಡೆಸಿದ ಚೆನ್ನೈನ ಹಸಿರು ಪೀಠ 52 ಕೋಟಿ ರೂಪಾಯಿ ದಂಡ ವಿಧಿಸಿದೆ.
ಪರಿಸರ ನಿಯಮ ಉಲ್ಲಂಘನೆ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮದ ಕಾರಣಕ್ಕಾಗಿ ಈ ಮೊದಲೇ ಯುಪಿಸಿಎಲ್ ಠೇವಣಿ ಯಾಗಿರಿಸಿದ್ದ ಐದು ಕೋಟಿ ರೂಪಾಯಿಯನ್ನು ದಂಡ ಮೊತ್ತಕ್ಕೆ ವಿನಿಯೋಗ ಮಾಡಿಕೊಳ್ಳಲು ಹಸಿರು ಪೀಠ ಸೂಚಿಸಿದೆ.
ಮೂರು ತಿಂಗಳೊಳಗೆ ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ಹಣ ಪಾವತಿಸಲು ಸೂಚನೆ ನೀಡಲಾಗಿದ್ದು, ದಂಡದ ಹಣವನ್ನು ಪರಿಸರ ಸುರಕ್ಷೆಗೆ ಬಳಸಿಕೊಳ್ಳುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಲಾಗಿದೆ.
ಅಲ್ಲದೇ ಯುಪಿಸಿಎಲ್ ಪರಿಸರದ 10 ಕಿಲೋ ಮೀಟರ್ ಪ್ರದೇಶದ ಸಮೀಕ್ಷೆಗೆ ಹಸಿರು ಪೀಠ ಸೂಚನೆ ನೀಡಿದ್ದು, ಆಗಿರುವ ನಷ್ಟವನ್ನು ಅಂದಾಜಿಸಲು ಸಮಿತಿ ರಚಿಸಲು ಆದೇಶ ನೀಡಿದೆ.
ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವಾಗಿರುವ ಯುಪಿಸಿಎಲ್ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಕಾರ್ಯಾಚರಿಸುತ್ತಿದೆ.