ಕಾಪು: ಇಲ್ಲಿನ ಕಟಪಾಡಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ಕಟಪಾಡಿ ಸಹಕಾರಿ ಬ್ಯಾಂಕ್ನಿಂದ 45 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ವಂಚಿಸಿದ ಆರೋಪಿಗಳನ್ನು ರಿಯಾನತ್ ಬಾನು ಹಾಗೂ ಆಕೆಯ ಪತಿ ನೂಮನ್ ಇಸ್ಮಾಯಿಲ್ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಆರೋಪಿಗಳಿಬ್ಬರು ಕಟಪಾಡಿ ಸಹಕಾರಿ ಬ್ಯಾಂಕ್ನಿಂದ ಸಾಲ ಪಡೆದಿದ್ದ, ಅವರಿಗೆ ದಿನೇಶ್ ಮತ್ತು ರಾಜೇಶ್ ಜಾಮೀನುದಾರರಾಗಿದ್ದರು. ಸಾಲ ಪಡೆದ ಆರೋಪಿಗಳು ಮೂರು ತಿಂಗಳ ಮಾಸಿಕ ಕಂತನ್ನು ಸಂಘಕ್ಕೆ ಪಾವತಿಸಿದ್ದು ಅನಂತರದ ಕಂತನ್ನು ಪಾವತಿ ಮಾಡದೇ ಬಾಕಿಯಿರಿಸಿಕೊಂಡಿದ್ದರು. ಈ ಬಗ್ಗೆ ಸಂಘದವರಿಗೆ ಆರೋಪಿಗಳ ಮೇಲೆ ಅನುಮಾನ ಬಂದಿದ್ದು, ನಂತರದಲ್ಲಿ ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ, ಆರೋಪಿಗಳು ಸಾಲ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘದ ಶಾಖಾ ಪ್ರಧಾನ ವ್ಯವಸ್ಥಾಪಕ ಮೊದಿನ್ ಡಿ ಖಾನ್ ನೀಡಿದ ದೂರಿನಂತೆ ನಾಲ್ಕು ಮಂದಿ ಆರೋಪಿಗಳ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.