ಬೆಳ್ತಂಗಡಿ: ಇಲಿಪಾಷಣ ಸೇವಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುದುವೆಟ್ಟಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಕಲ್ಲಾಜೆ ನಿವಾಸಿ ವೆಂಕಟೇಶ್ ಭಂಡಾರಿ ಮತ್ತು ಸುಮಿತ್ರಾ ದಂಪತಿಗಳ ಪುತ್ರಿ ಅನಿತಾ (17) ಕಳೆದ ನಾಲ್ಕು ದಿನದ ಹಿಂದೆ ಎರಡು ಪ್ಯಾಕ್ ಇಲಿ ಪಾಷಾಣ ಸೇವಿಸಿ ತೀವ್ರ ಅಸ್ಪಸ್ಥಗೊಂಡಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ 3 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅನಿತಾ ಜು.3ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಈಕೆ ಪ್ರಸ್ತುತ ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದು ಮನೆಯವರಿಗೆ ಕಷ್ಟ ಕೊಡಲು ನನ್ನಿಂದ ಆಗಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.
ಗೆಳತಿಯ ಹಾದಿಯನ್ನೇ ಹಿಡಿದ ಅನಿತಾ:
ಈಕೆಯ ಗೆಳತಿ ಕಳೆದ ಆರು ತಿಂಗಳ ಹಿಂದೆ ಧರ್ಮಸ್ಥಳ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ತೃಷಾ (16) ಎಂಬಾಕೆ ಇಲಿಪಾಷಣ ತಿಂದು ಸಾವನ್ನಪ್ಪಿದ್ದಳು. ಆಕೆಯ ಸಾವಿನ ಬಳಿಕ ಅನಿತಾ ಕೂಡಾ ಮಾನಸಿಕವಾಗಿ ಕುಗ್ಗಿದ್ದಳು ಎಂದು ಆಕೆಯನ್ನು ಬಲ್ಲವರು ತಿಳಿಸಿದ್ದು, ಆತ್ಮೀಯ ಗೆಳತಿ ತೃಷಾ ಸಾವಿನಿಂದ ಮಾನಸಿಕವಾಗಿ ಅನಿತಾ ನೊಂದಿದ್ದಳಾ ಅನ್ನೋ ಅನುಮಾನ ಕಾಡುತ್ತಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಮೃತ ಬಾಲಕಿಯರು ಒಂದೇ ಗ್ರಾಮದವರಾಗಿದ್ದಾರೆ.