ಕಡಬ;ಮದುವೆಯ ಡಿನ್ನರ್ ನಲ್ಲಿ ಯುವತಿಯ ಫೋಟೋ ತೆಗೆದ ಯುವಕನ ಮನೆಗೆ ನುಗ್ಗಿ ತಂಡವೊಂದರಿಂದ ಹಲ್ಲೆ ಮಾಡಿರುವ ಘಟನೆ ಕಡಬ ಸಮೀಪದ ರೆಂಜಲಾಡಿ ಎಂಬಲ್ಲಿ ನಡೆದಿದೆ.
ರೆಂಜಲಾಡಿಯ ಯುವತಿಯ ವಿವಾಹದ ಔತಣಕೂಟ ಏ.29ರಂದು ನಡೆದಿತ್ತು. ಯುವತಿಯೊಂದಿಗೆ ನಿಶಾಂತ್ ಎಂಬ ಯುವಕ ಇರುವ ಫೋಟೋವನ್ನು ಬಾಂತಾಜೆ ನಿವಾಸಿ ದಿವಾಕರ ಎಂಬವರು ತೆಗೆದಿದ್ದಾರೆ . ಅದೇ ದಿನ ರಾತ್ರಿ 11.30ರ ಸುಮಾರಿಗೆ ನಿಶಾಂತ್ ತನ್ನ ಸಹಚರ ಜೊತೆ ತೆರಳಿ ದಿವಾಕರ ಮನೆಗೆ ಬಂದಿದ್ದಾರೆ. ಈ ವೇಳೆ ದಿವಾಕರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ವೇಳೆ ದಿವಾಕರ ಅವರ ಅತ್ತಿಗೆ ಜಗಳ ಬಿಡಿಸಲು ಯತ್ನಿಸಿದಾಗ ಮೂವರು ಯುವತಿಯರೂ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ನೆರೆಮನೆಯ ಹಿರಿಯರೊಬ್ಬರು ರಕ್ಷಣೆಗೆ ಬಂದಾಗ ಅವರಿಗೂ ನಿಶಾಂತ್ ಹಾಗೂ ತಂಡ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನೆರೆಮನೆಯ ಬಾಬು ಗೌಡ ಮತ್ತು ಪ್ರದೀಪ್ ಅವರುಗಳು ಗಾಯಾಳುಗಳನ್ನು ಉಪಚರಿಸಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.