ಬಂಟ್ವಾಳ; ವೀಡಿಯೋ ನೋಡಿದರೆ ಹಣ ಬರುತ್ತದೆ ಎಂದು ವೀಡಿಯೋ ನೋಡಿ ಯುವಕನೊಬ್ಬ 1.12 ಲಕ್ಷ ರೂ. ಕಳೆದುಕೊಂಡ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರುಣ್ ಎಂಬವರಿಗೆ ನ.8, 2024 ರಂದು ವಾಟ್ಸಾಪ್ ಮೂಲಕ ಲಿಂಕ್ವೊಂದು ಬಂದಿದ್ದು, ಅದನ್ನು ಒತ್ತಿದಾಗ ಆರ್ಪಿಸಿ ಆಪ್ ಓಪನ್ ಆಗಿತ್ತು. ಅದರ ಮೂಲಕ ಅಶಕ್ತರಿಗೆ ನೆರವು ನೀಡಲಾಗುತ್ತದೆ ಎನ್ನುವ ಮಾಹಿತಿ ಬಂದಿತ್ತು. ದಿನಕ್ಕೆ 40 ವೀಡಿಯೋಗಳನ್ನು ನೋಡಿದರೆ 2 ಸಾವಿರ ರೂ. ಸಿಗುತ್ತದೆ ಎನ್ನಲಾಗಿತ್ತು. ಅದಕ್ಕಗಿ ವರುಣ್ ತನ್ನ ಬ್ಯಾಂಕ್ ಖಾತೆಯಿಂದ 56 ಸಾವಿರ ರೂ.ಗಳನ್ನು ಅವರು ಹೇಳಿದ ಖಾತೆಗೆ ಜಮೆ ಮಾಡಿದ್ದರು.
ನಂತರ ನಿತ್ಯವೂ ವರುಣ್ ವೀಡಿಯೋ ನೋಡುತ್ತಿದ್ದು, ಅವರ ಲಿಂಕ್ ಖಾತೆಯಲ್ಲಿ 1 ಲಕ್ಷ ರೂ. ಜಮೆ ಆಗಿತ್ತು. ಅದನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಮತ್ತೆ 56 ಸಾವಿರ ರೂ.ಗಳನ್ನು ಯುಪಿಐ ಮೂಲಕ ಕಳುಹಿಸಬೇಕು ಎಂಬ ಮಾಹಿತಿ ನೀಡಲಾಗಿತ್ತು. ಡಿ.13 ರಂದು ಮತ್ತೆ ಬರುಲ ಕಾರ್ತಿಕ ಹೆಸರಿನ ಖಾತೆಗೆ ಹಣ ಜಮೆ ಮಾಡಲಾಗಿದೆ. ನಂತರ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಇದನ್ನು ವರುಣ್ ತನ್ನ ಸ್ನೇಹಿತರಲ್ಲಿ ತಿಳಿಸಿದ್ದಾರೆ. ಅನಂತರ ಇದು ಸೈಬರ್ ವಂಚನೆಯ ಜಾಲ ಎಂದು ತಿಳಿದು ಬಂದಿದೆ.