ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಭಕ್ತರಿಂದ ಅಲಂಕಾರ ಸೇವೆ ನಡೆಯಿತು. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಚಂದ್ರಾ ಲೇ ಔಟ್ ನಲ್ಲಿರುವ ಸಾಯಿ ಫ್ಲವರ್ ಡೆಕೊರೇಟರ್ ಸಂಸ್ಥೆಯ ಆಶ್ರಯದಲ್ಲಿ ಗೋಪಾಲ ರಾವ್ , ಶ್ರವಣಮೂರ್ತಿ ಹಾಗೂ ಆನಂದ್ ನೇತೃತ್ವದಲ್ಲಿ ಭಕ್ತರು ಧರ್ಮಸ್ಥಳಕ್ಕೆ ಬಂದು ದೇವಸ್ಥಾನ ,ಧರ್ಮಾಧಿಕಾರಿಗಳಾದ ಹೆಗ್ಗಡೆಯವರ ನಿವಾಸ ಮೊದಲಾದ ಕಟ್ಟಡಗಳನ್ನು ಅಲಂಕಾರ ಸೇವೆ ಮಾಡಿದರು.
ಸತತ ಐದು ದಿನಗಳಿಂದ 45 ಮಂದಿ ಅಲಂಕಾರ ಸೇವೆಯಲ್ಲಿ ನಿರತರಾಗಿದ್ದು ಶುಕ್ರವಾರ ಸೇವೆ ಪೂರ್ಣಗೊಂಡಿದೆ . ವಿವಿಧ ಜಾತಿಯ ಹಣ್ಣುಗಳು , ಹೂಗಳು ಮತ್ತು ಪ್ರಾಕೃತಿಕವಾಗಿ ದೊರಕುವ ಎಲೆಗಳನ್ನು ಬಳಸಿ ಪ್ರಕೃತಿ – ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿ ಸಿಂಗರಿಸಲಾಗಿದೆ.
ಅಲಂಕಾರಕ್ಕೆ ದಾಳಿಂಬೆ , ಬೇಲದ ಕಾಯಿ , ಜೋಳ , ಎಳನೀರು , ಬಾಳೆಹಣ್ಣು , ಅಡಿಕೆ , ತೆಂಗು , ಕಬ್ಬು , ತೆಂಗಿನ ಗರಿ, ಗುಲಾಬಿ , ಸೇವಂತಿಗೆ , ಕ್ರಿಸ್ ಅಂತೋರಿಯಂ , ಸುಗಂಧರಾಜ , ಸೇವಂತಿಗೆ , ಕಾರ್ನಿಶಿಯಾ , ಆರ್ಕಿಡ್, ಎಳೆಗರಿ , ಸೈಬೋಸ್ , ಡೈಸಿನಾ ಪರಿಕರಗಳ ಸಂಗ್ರಹ , ಸಾಗಾಟ , ಅಲಂಕಾರ ಸೇವೆ ಇತ್ಯಾದಿಗಳನ್ನು ಭಕ್ತಾದಿಗಳೆ ಉಚಿತವಾಗಿ ಮಾಡಿದ್ದಾರೆ.
ಪ್ರತಿ ವರ್ಷ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ದೇವಸ್ಥಾನದ ಅಲಂಕಾರ ಸೇವೆ ಮಾಡುತ್ತಿದ್ದು ತಮ್ಮ ವ್ಯವಹಾರದಲ್ಲಿ ಲಾಭದಾಯಕವಾಗಿ ಪ್ರಗತಿ ಸಾಧಿಸಿದ್ದೇವೆ, ಎಲ್ಲಕ್ಕಿಂತ ಮಿಗಿಲಾಗಿ ಮನೆಯಲ್ಲಿ ಹಾಗೂ ಮನದಲ್ಲಿ ಸುಖ , ಶಾಂತಿ , ನೆಮ್ಮದಿ ಮತ್ತು ಸಂತೋಷ ದೊರಕಿದೆ ಎಂದು ಸಾಯಿ ಫ್ಲವರ್ ಡೆಕೊರೇಟರ್ ಮಾಲಕ ಗೋಪಾಲ ರಾವ್ ತಿಳಿಸಿದ್ದಾರೆ.
ಧರ್ಮಾಧಿಕಾರಿ ಡಿ . ವೀರೇಂದ್ರ ಹೆಗ್ಗಡೆಯವರು ಅಲಂಕಾರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಕ್ತರನ್ನು ಅಭಿನಂದಿಸಿದ್ದಾರೆ.