ಪುತ್ತೂರಿನಿಂದ ಉತ್ತರಭಾರತದ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದ ವ್ಯಕ್ತಿಯನ್ನು ರೈಲಿನಲ್ಲಿ ಅಪರಿಚಿತ ಗ್ಯಾಂಗ್ ದರೋಡೆ ಮಾಡಿದ ಘಟನೆ ನಡೆದಿದೆ. ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ವೀಣಾ ಸೇರಿದಂತೆ ಜು. 29ರಂದು ಯಾತ್ರಿಗಳ ತಂಡವು ದಿಲ್ಲಿಗೆ ಹೊರಟು, ಜು.31ರಂದು ದಿಲ್ಲಿಯ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಇಳಿದಿತ್ತು. ಅಲ್ಲಿ ಊಟ ಮಾಡಲು ಹೊಟೇಲಿಗೆ ತೆರಳಿ, ಬಳಿಕ ರಿಕ್ಷಾದ ಮೂಲಕ ರೈಲು ನಿಲ್ದಾಣಕ್ಕೆ ವಾಪಸು ಬರಬೇಕಿತ್ತು. ಅದರಂತೆ ಊಟ ಮುಗಿಸಿ ಐದಾರು ಆಟೋದಲ್ಲಿ 30 ಜನರು ಹೊರಟರು.
ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ಇದ್ದ ರಿಕ್ಷಾದಲ್ಲಿ ಮತ್ತೂ ಮೂವರಿದ್ದರು. ವೀಣಾ ಸಹಿತ ಇತರ ಮೂವರು ರಿಕ್ಷಾದಿಂದ ಇಳಿದು ನಿಲ್ದಾಣಕ್ಕೆ ಹೊರಟರು. ಸುಬ್ರಹ್ಮಣ್ಯ ಭಟ್ ಕೊನೆಯವರಾಗಿ ಇಳಿದರು. ಆದರೆ ರಿಕ್ಷಾ ಚಾಲಕ ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ. ಚಾಲಕನ ಹತ್ತಿರವಿದ್ದ ಸ್ಥಳೀಯರ ಗುಂಪೊಂದು ಒತ್ತಾಯಿಸಿದಾಗ 300 ರೂ. ನೀಡಿ ಬರುಷ್ಟರಲ್ಲಿ ರೈಲು ಹೊರಟಿತ್ತು.
ಪತಿ ರೈಲಿನೊಳಗೆ ಇರಬಹುದು ಎಂದುಕೊಂಡು ವೀಣಾ ರೈಲು ಏರಿದರು. ರೈಲು ಹೊರಟ ಮೇಲೆ ಪತಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ತತ್ಕ್ಷಣ ಅವರು ಕರೆ ಮಾಡಿದರು. ಈ ವೇಳೆ ಸುಬ್ರಹ್ಮಣ್ಯ ಭಟ್ ತಾನು ಬಾಕಿ ಆಗಿರುವುದಾಗಿ ತಿಳಿಸಿದ್ದು, ಇನ್ನೊಂದು ರೈಲಿನಲ್ಲಿ ಬರುವುದಾಗಿ ಹೇಳಿದ್ದರು. ಬಳಿಕ ರಾತ್ರಿ 8.30ಕ್ಕೆ ರೈಲಿನಲ್ಲಿ ಅಯೋಧ್ಯೆಗೆ ತೆರಳಿದ್ದರು.ರೈಲಿನ ಸಾಮಾನ್ಯ ಬೋಗಿಯಲ್ಲಿದ್ದ ಸುಬ್ರಹ್ಮಣ್ಯ ಭಟ್ಟರನ್ನು ಅಪರಿಚಿತ ನೋರ್ವ ಸ್ನೇಹದಿಂದ ಮಾತನಾಡಿಸಿದ್ದಾನೆ. ಆ.1ರಂದು ಮುಂಜಾನೆ 4 ರ ಹೊತ್ತಿಗೆ ಶೌಚಾಲಯಕ್ಕೆ ಹೋಗಿ ಮರಳುವ ವೇಳೆ ಅಪರಿಚಿತನು ಹಣ, ಮೊಬೈಲ್, ಬಟ್ಟೆ ಬರೆ ಇದ್ದ ಲಗೇಜ್ನೊಂದಿಗೆ ಪರಾರಿಯಾಗಿದ್ದ. ಕಳವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 20 ಸಾವಿರ ರೂ. ಆಗಿತ್ತು. ಅಯೋಧ್ಯೆಗೆ ತೆರಳದೆ ಅದರ ಹಿಂದಿನ ನಿಲ್ದಾಣದಲ್ಲಿ ಇಳಿದ ಭಟ್ಟರು, ಸ್ಥಳೀಯರೋರ್ವರ ಸಹಕಾರ ಪಡೆದು ಲಕ್ನೋ ರೈಲ್ವೇ ಪೊಲೀಸ್ ಠಾಣೆಗೆ ತೆರಳಿ ಅವರು ವಿಷಯ ತಿಳಿಸಿದರು.
ಲಕ್ನೋದಿಂದ ಇನ್ನೊಂದು ರೈಲಿನ ಮೂಲಕ ಪ್ರತಾಪಗಡಕ್ಕೆ ಬಂದ ಅವರು, ಜೇಬಿನಲ್ಲಿದ್ದ ಸ್ವಲ್ಪ ಹಣದಲ್ಲಿ ಸಣ್ಣ ಮೊಬೈಲ್, ಸಿಮ್ ಖರೀದಿಸಿದ್ದಾರೆ. ಆ. 1ರ ರಾತ್ರಿ 7ಕ್ಕೆ ದೂರವಾಣಿ ಮೂಲಕ ಪತ್ನಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಅದಾಗಲೇ ಪತ್ನಿ ಅವರು ಆಯೋಧ್ಯೆ ತಲುಪಿದ್ದರು. ಸುಬ್ರಹ್ಮಣ್ಯ ಭಟ್ಟರು ತಂಡದಿಂದ ಪ್ರತ್ಯೇಕಗೊಂಡ ವಿಷಯ ಬೆಂಗಳೂರಿನಲ್ಲಿರುವ ಪುತ್ರಿಯ ಗಂಡ ನಿಗೆ ತಿಳಿದು, ಅವರು ಆ.2ರಂದು ಬೆಳಗ್ಗೆ ಪ್ರತಾಪಗಡಕ್ಕೆ ತಲುಪಿದರು. ಅಲ್ಲಿ ಮಾವನನ್ನು ಸಂಪರ್ಕಿಸಿ ಬಳಿಕ ಗಯಾ, ಕಾಶಿ ದರ್ಶನ ಮುಗಿಸಿ ವಿಮಾನದಲ್ಲಿ ಬೆಂಗಳೂರಿಗೆ ಮಗಳ ಮನೆಗೆ ಬಂದರು. ಎರಡು ದಿನ ಇದ್ದು ಬಳಿಕ ಊರಿಗೆ ಮರಳಿದ್ದಾರೆ.
ರೈಲಿನಲ್ಲಿ ಪರಿಚಿತನಂತೆ ವರ್ತಿಸಿ ದ್ದವನ ಜತೆಗೆ ಇನ್ನೂ ಇಬ್ಬರಿದ್ದರು. ಅವರು ಭಟ್ಟರಿಗೆ ಮಧ್ಯರಾತ್ರಿ ಚಹಾ ಕೊಟ್ಟಿದ್ದರು. ಬೆಳಗ್ಗೆ 3.30ರ ಹೊತ್ತಿಗೆ ಅಪರಿಚಿತರು, “ಶೌಚಾಲಯಕ್ಕೆ ಹೋಗಿ ಬನ್ನಿ, ನೀವು ಇಳಿಯುವ ನಿಲ್ದಾಣ ಹತ್ತಿರದಲ್ಲಿದೆ’ ಎಂದಿದ್ದರು. ಹೀಗಾಗಿ ಸುಬ್ರಹ್ಮಣ್ಯ ಭಟ್ ಶೌಚಾಲಯಕ್ಕೆ ಹೋದಾಗ ಅಪರಿಚಿತರು ಲಗೇಜನ್ನು ದೋಚಿದರು. ಚಹಾ ಕುಡಿದ ಬಳಿಕ ನಿದ್ರೆಯ ಮಂಪರು ಆವರಿಸಿದ್ದರಿಂದ ಅವರು ಯಾವ ನಿಲ್ದಾ ಣದಲ್ಲಿ ಇಳಿದರು ಎನ್ನುವುದು ಸುಬ್ರಮಣ್ಯ ಭಟ್ ಅವರಿಗೆ ಗೊತ್ತಾಗಿಲ್ಲ. ಅಪರಿಚಿತರು ಚಹಾದಲ್ಲಿ ಅಮಲು ಪದಾರ್ಥ ಬೆರೆಸಿರುವ ಸಾಧ್ಯತೆ ಇದೆ ಎಂದು ಅವರ ಪುತ್ರ ಕೃಷ್ಣ ಪ್ರಸಾದ್ ಕಕ್ಕೂರು ಹೇಳಿದ್ದಾರೆ.