ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಎಲ್ಲಾ ಬಿಲ್ಲವ ಸಂಘಟನೆಗಳು ಮತ್ತು ಗ್ರಾಮ ಸಮಿತಿಯ ಸಹಕಾರದಲ್ಲಿ ಕರ್ನಾಟಕ ಸರಕಾರ 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಕೇವಲ ಶೇಕಡಾ 20 ವಿದ್ಯಾರ್ಥಿಗಳು ಓದುವ ಕನ್ನಡ (ಐಚ್ಛಿಕ) ಪಠ್ಯದಲ್ಲಿ ಸೇರಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಮತ್ತು ಅವರ ಅನುಯಾಯಿಗಳಿಗೆ ಅವಮಾನ ಮಾಡಿರುವುದಾಗಿ ಆರೋಪಿಸಿ ಅದರ ವಿರುದ್ಧ ಇಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜೀತ್ ಸುರತ್ಕಲ್ ಪ್ರತಿಭಟನೆಯನ್ನು ಉದ್ದೇಶಿಸಿ ದಿಕ್ಕೂಚಿ ಭಾಷಣದಲ್ಲಿ ಮಾತನಾಡಿ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದದನ್ನು ಪುನಃ ಸೇರಿಸುವ ತನಕ ಸಮಸ್ತ ಹಿಂದುಳಿದ ಪಂಗಡದ 26 ಜಾತಿಯವರು ಹೋರಾಟ ಮಾಡುವ ಮೂಲಕ ವಿಶ್ವ ಗುರು ನಾರಾಯಣ ಗುರುಗಳಿಗೆ ಗೌರವ ನೀಡಲಾಗುವುದು ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಸಂಘದ ಗೌರವಾಧ್ಯಕ್ಷ ಮಾಜಿ ಶಾಸಕ ಕೆ.ವಸಂತ ಬಂಗೇರ, ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ಲಕ್ಕ ಮಾಜಿ ಅಧ್ಯಕ್ಷರುಗಳು,ನಾರಾಯಣ ಗುರುಗಳ ಅನುಯಾಯಿಗಳು, ಯುವ ಬಿಲ್ಲವ ವೇದಿಕೆ,ಬಿಲ್ಲವ ಮಹಿಳಾ ವೇದಿಕೆ,ಯುವವಾಹಿನಿ ಸೇರಿದಂತೆ ಬಿಲ್ಲವ ಸಮಾಜ ವಿವಿಧ ಸಂಘಟನೆಗಳ, ಗ್ರಾಮ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಬಳಿಕ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.