ಕಡಬ; ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದಿದ್ದ ಮೂವರು ಮಕ್ಕಳನ್ನು ರಕ್ಷಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಕಡಬ ಸಮೀಪದ ಕಲ್ಲುಗುಡ್ಡೆಯ ಗೋಳಿಯಡ್ಕ ಎಂಬಲ್ಲಿ ಡಿ.31 ರ ತಡರಾತ್ರಿ ನಡೆದಿದೆ.
ಕಡಬ ಸಮೀಪದ ಕಲ್ಲುಗುಡ್ಡೆಯ ಗೋಳಿಯಡ್ಕ ಎಂಬಲ್ಲಿ ಡಿ.31 ರ ತಡರಾತ್ರಿ ಮೂವರು ಮಕ್ಕಳು ರಸ್ತೆ ಬದಿಯಲ್ಲಿ ಕುಳಿತಿದ್ದರು. ಅನುಮಾನಗೊಂಡ ಸ್ಥಳೀಯರು ಮಕ್ಕಳನ್ನು ಪ್ರಶ್ನಿಸಿದ್ದಾಗ ಸಮರ್ಪಕ ಮಾಹಿತಿ ನೀಡಲಿಲ್ಲ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪ್ರಕಾರ ಬೆಂಗಳೂರು ಮೂಲದ ಮೂವರು ಮಕ್ಕಳು ಧರ್ಮಸ್ಥಳಕ್ಕೆ ತೆರಳುವ ಸಲುವಾಗಿ ರೈಲು ಮೂಲಕ ನೆಟ್ಟಣದಲ್ಲಿರುವ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಬಂದಿಳಿದು ಬಳಿಕ ಬಸ್ ಮೂಲಕ ಗೋಳಿಯಡ್ಕ ದಲ್ಲಿ ಇಳಿದಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ಮೂವರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಅಲ್ಲದೆ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದಾಗ ಮನೆಯಲ್ಲಿ ತಿಳಿಸದೆ ಬಂದಿರುವುದನ್ನು ಒಪ್ಪಿಗೊಂಡಿದ್ದು ಹೀಗಾಗಿ ಪೋಷಕರ ದೂರವಾಣಿ ಪಡೆದು ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದರು. ಅದರಂತೆ ಮಕ್ಕಳ ಪೋಷಕರು ಜ.1 ರಂದು ಕಡಬ ಠಾಣೆಗೆ ಬರುತ್ತಿರುವುದಾಗಿ ತಿಳಿದು ಬಂದಿದೆ.