ಕುಂದಾಪುರ : ನೀರಿನಲ್ಲಿ ಮುಳುಗುತ್ತಿದ್ದ ಮಗ ಹಾಗೂ ಪತಿಯನ್ನು ರಕ್ಷಿಸಲು ಯತ್ನಿಸಿ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಕೇರಳದ ಮಹಿಳೆ ಚಾಂದಿ ಶೇಖರನ್ (42) ಅವರ ಮೃತದೇಹವು ಕೊಲ್ಲೂರು ಗ್ರಾಮದ ಸಂಪ್ರೆ ಎಂಬಲ್ಲಿ ನಿನ್ನೆ ಸಂಜೆ ಪತ್ತೆಯಾಗಿದೆ.
ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿದ ಕೇರಳದ ತಿರುವನಂತಪುರದ ಯಾತ್ರಾರ್ಥಿ ಕುಟುಂಬದ ಮಹಿಳೆಯೊಬ್ಬರು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ಸಂಜೆ ಸಂಭವಿಸಿತ್ತು. ಓಣಂ ಪ್ರಯುಕ್ತ ಮುರುಗನ್ ಅವರು ಪತ್ನಿ ಚಾಂದಿ ಶೇಖರನ್, ಮಗ ಆದಿತ್ಯನ್ ಹಾಗೂ ಸಂಬಂಧಿಕರು ಸೇರಿದಂತೆ 14 ಮಂದಿಯೊಂದಿಗೆ ಸೆ.10ರಂದು ತಿರುವನಂತಪುರದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದರು.
ಕೊಲ್ಲೂರು ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡಿದ್ದ ಇವರು ಶನಿವಾರ ಸಂಜೆ ವೇಳೆ ಸೌರ್ಪಾಣಿಕ ಸ್ನಾನ ಘಟ್ಟಕ್ಕೆ ಬಂದಿದ್ದಾರೆ. ಈ ವೇಳೆ ನೀರಿಗಿಳಿದ ಮುರುಗನ್ ನೀರಿನ ಸೆಳೆತಕ್ಕೆ ಸಿಲುಕಿದಾಗ ಪುತ್ರ ಆದಿತ್ಯ ರಕ್ಷಣೆಗೆ ಮುಂದಾಗಿದ್ದಾನೆ. ಈ ವೇಳೆ ಆದಿತ್ಯ ಕೂಡಾ ನೀರಿನ ಸೆಳೆತಕ್ಕೆ ಸಿಲುಕಿದ್ದನ್ನು ಗಮನಿಸಿದ ಚಾಂದಿ ನದಿ ನೀರಿಗೆ ಧುಮುಕಿದ್ದಾರೆನ್ನಲಾಗಿದೆ. ಆದರೆ ಈಜು ಬಾರದ ಅವರು ನೀರಿನ ಸೆಳತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ಇದೇವೇಳೆ ಬೊಬ್ಬೆ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಮುರುಗನ್ ಮತ್ತು ಆದಿತ್ಯ ಅವರನ್ನು ರಕ್ಷಿಸಿದ್ದರು.ಆದರೆ ಇಬ್ಬರನ್ನು ರಕ್ಷಿಸಲು ಹೋದ ಚಾಂದಿ ಸಾವನ್ನಪ್ಪಿದ್ದು ದುರಂತ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.