ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಪಟ್ಟಿ ತಯಾರಿಸಿದೆ. ಈ ಪಟ್ಟಿಯಲ್ಲಿ ಮಂಗಳೂರಿನ ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನವೂ ಇದೆ ಎಂಬುದು ತಿಳಿದು ಬಂದಿದೆ.
2009 ರ ಹಿಂದಿನ ಒಟ್ಟು 902 ಅನಧಿಕೃತ ಕಟ್ಟಡಗಳ ತೆರವಿನ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದರಲ್ಲಿ ದೇವಸ್ಥಾನಗಳು 667,ಮಸೀದಿಗಳು 186,ಚರ್ಚ್ 56, ಇತರೆ ಧಾರ್ಮಿಕ ಕಟ್ಟಡಗಳು 11 ಇವೆ ಎನ್ನಲಾಗಿದೆ.
ಮಂಗಳೂರಿನ ಶಕ್ತಿನಗರದಲ್ಲಿರುವ ವೈದ್ಯನಾಥ ದೈವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದ್ದು, ಅಪಾರ ಭಕ್ತಗಣವನ್ನು ಹೊಂದಿದೆ. ಕ್ಷೇತ್ರದ ಮಹಿಮಾನ್ವಿತ ಕಾರಣಿಕ ಶಕ್ತಿಗಳ ಬಗ್ಗೆ ಜನ ಅಗಾಧ ಶ್ರದ್ಧೆ ಭಕ್ತಿ ಹೊಂದಿದ್ದಾರೆ. ಇದರ ನಡುವೆ ಇದೀಗ ದೈವಸ್ಥಾನ ತೆರವುಗೊಳಿಸುವ ವಿಚಾರ ಭಕ್ತರು ಆತಂಕಕ್ಕೀಡು ಮಾಡಿದೆ.
ಆದರೆ ಈ ಬಗ್ಗೆ ಮಾಹಿತಿ ನೀಡಿರುವ ದೈವಸ್ಥಾನದ ಆಡಳಿತ ಮಂಡಳಿ, ಜಿಲ್ಲಾಡಳಿತದಿಂದ ನಮಗೆ ಯಾವುದೇ ನೋಟೀಸ್ ಬಂದಿಲ್ಲ. ನಮ್ಮ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದ್ದು, ಅನಧಿಕೃತವೂ ಅಲ್ಲ. ಆದರೆ ನಮ್ಮ ದೇವಸ್ಥಾನವೂ ಅನಧಿಕೃತ ಧಾರ್ಮಿಕ ಪಟ್ಟಿಯಲ್ಲಿ ಇರುವ ಬಗ್ಗೆ ಮಾಧ್ಯಮಗಳಿಂದ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಬಗ್ಗೆ ಸೂಚನೆ ನೀಡಿದರೆ ಮುಂದೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ., ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇವಲ ಅನಧಿಕೃತ ಕಟ್ಟಡಗಳ ಪಟ್ಟಿ ಮಾಡಿದ್ದೇವೆ. ಈಗ ಕಟ್ಟಡ ತೆರವಿಗೆ ಸೂಚನೆ ನೀಡಿಲ್ಲ. ರಾಜ್ಯ ಸರ್ಕಾರ ಮುಂದಿನ ಆದೇಶದ ಬಳಿಕ ಮುಂದುವರಿಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.