ಉಡುಪಿ; ಎಂಲ್ ಎ ಸೀಟಿ ಹೆಸರಲ್ಲಿ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಹಿಂದೂ ಕಾರ್ಯಕರ್ತೆಯನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.ಆದರೆ ಈಕೆ ಕೋಟ್ಯಂತರ ರೂಪಾಯಿ ಹೇಗೆ ವಂಚನೆ ಮಾಡಿದಳು ಅನ್ನೋದನ್ನು ನೋಡುತ್ತಾ ಹೋದ್ರೆ ನಿಜಕ್ಕೂ ಈಕೆ ಹಾಲಿವುಡ್ ಸಿನಿಮಾ ನಿರ್ದೇಶಕರನ್ನು ಮೀರಿಸುತ್ತಾಳೆ ಎಂದು ಅನ್ನಿಸದೇ ಇರಲ್ಲ. ಕೋಟ್ಯಂತರ ರೂಪಾಯಿ ಡೀಲ್ ಗಾಗಿ ಮೊದಲೇ ತಯಾರಿ ಮಾಡಿಕೊಂಡಿದ್ದ ಆಕೆ ಅದಕ್ಕಾಗಿ ಬೇಕಾದ ಪಾತ್ರಗಳನ್ನು ತಾನೇ ಸೃಷ್ಟಿ ಮಾಡಿಕೊಂಡಿದ್ದಳು.
ಯಾವ ಸಿನಿಮಾಗೂ ಕಮ್ಮಿಯಿಲ್ಲ ಚೈತ್ರಾ ಕುಂದಾಪುರ ವಂಚನೆಯ ಕಹಾನಿ
ಚಿಕ್ಕಮಗಳೂರು ಜಿಲ್ಲೆಯ ಬೈಂದೂರ ತಾಲೂಕಿನ ಬಿಜೂರು ಗ್ರಾಮದವರಾದ ಗೋವಿಂದಬಾಬು ಪೂಜಾರಿ ಅವರು 9 ವರ್ಷಗಳ ಕಾಲ ರಾಷ್ಟ್ರೀಯ ಸೇವಾ ಸಂಘ ಕಾರ್ಯಕರ್ತರಾಗಿದ್ದರು. ನಂತರ ಕಳೆದ 6 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವಾಗ ಬೈಂದೂರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಹೀಗಿರುವಾಗಲೇ ಇವರಿಗೆ ಚೈತ್ರಾ ಕುಂದಾಪುರ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುವ ಮೋರ್ಚಾ ಗಗನ್ ಕಡೂರು ಅವರ ಪರಿಚಯವಾಗುತ್ತದೆ. ನಂತರ ಇವರು ಟಿಕೆಟ್ ಕೊಡಿಸುವುದಾಗಿ ಹೇಳಿ ನಂಬಿಸುತ್ತಾರೆ. ನಂತರ ಇವರು ವಿಶ್ವನಾಥ್ ಜೀ ಎಂಬುವರನ್ನು ಪರಿಚಯಿಸುತ್ತಾರೆ. ಇವರು ಕಳೆದ 45 ವರ್ಷಗಳಿಂದ ಆರ್ಎಸ್ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಕೇಂದ್ರದ ಅಭ್ಯರ್ಥಿಯ ಸೆಲೆಕ್ಷನ್ ಕಮಿಟಿಯಲ್ಲಿ ಅವರು ಒಬ್ಬರಾಗಿರುತ್ತಾರೆ ಎಂದು ಹೇಳಿರುತ್ತಾರೆ.
ನಂತರ 2022 ರ ಜುಲೈ 7 ರಂದು ಗೋವಿಂದಬಾಬು ಪೂಜಾರಿಯನ್ನು ಚೈತ್ರಾ ಕುಂದಾಪುರ ಬೆಂಗಳೂರಿನ ಸರ್ಕಾರಿ ಅತಿಥಿ ಗೃಹಕ್ಕೆ ಕರೆಸಿಕೊಂಡು ವಿಶ್ವನಾಥ್ ಜೀ ಅವರನ್ನು ಭೇಟಿ ಮಾಡಿಸುತ್ತಾರೆ. ಈ ವೇಳೆ ವಿಶ್ವನಾಥ್ ಜಿ ನಾನು ಹೇಳಿದರೇ ಮಾತ್ರ ಟಿಕೆಟ್ ಅಂತಿಮವಾಗುತ್ತದೆ. ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು ಎಂದು ಹೇಳಿದ್ದರು. ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ 50 ಲಕ್ಷ ರೂ. ಗಗನ್ ಕಡೂರ್ಗೆ ನೀಡಬೇಕು. ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ 3 ಕೋಟಿ ರೂ. ನೀಡಬೇಕೆಂದು ವಿಶ್ವನಾಥ್ ಜೀ ಹೇಳಿದ್ದಾರೆ.
ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿದ್ದರು. ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅದರಂತೆ ಗೋವಿಂದಬಾಬು ಪೂಜಾರಿ ಅವರು 2022 ಜುಲೈ 7 ರಂದು ಶಿವಮೊಗ್ಗದ ಆರ್ಎಸ್ಎಸ್ ಕಚೇರಿ ಎದುರು 50 ಲಕ್ಷ ರೂ. ಹಣವನ್ನು ಪ್ರಸಾದ್ ಬೈಂದೂರು ಮುಖಾಂತರ ಗಗನ್ ಕಡೂರ್ಗೆ ನೀಡುತ್ತಾರೆ.
ನಂತರ ವಿಶ್ವನಾಥ್ ಜಿ, ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ಕಾನ್ಫರೆನ್ಸ್ ಕರೆ ಮಾಡಿ ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ. 2023ರ ಚುನಾವಣೆಯಲ್ಲಿ, ಬೈದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂದು ಮಾಹಿತಿ ನೀಡಿದ್ದಾರೆ. ಬಳಿಕ 2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಗೋವಿಂದಬಾಬು ಪೂಜಾರಿ ಅವರಿಗೆ ವಿಶ್ವನಾಥ್ ಜಿ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕರೆ ಮಾಡಿ ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿದೆ, ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿದ್ದಾರೆ.
ಅದರಂತೆ ಗೋವಿಂಬಾಬು ಪೂಜಾರಿ ಹಿರೇಹಡಗಲಿಗೆ ತೆರಳಿ ಸ್ವಾಮೀಜಿಯವರನ್ನು ಭೇಟಿಯಾಗಿದ್ದಾರೆ. ಅಲ್ಲಿ ಸ್ವಾಮಿಜಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಮುಂದಿನ ಪ್ರಕ್ರಿಯೆಗೆ ರೂ.1.5 ಕೋಟಿ ರೂ. ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಈ ವರ್ಷ ಜನವರಿ 16 ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಹಣ ನೀಡಿದ್ದಾರೆ. ಇದಕ್ಕೂ ಮುಂಚೆ 2022ರ ಡಿಸೆಂಬರ್ 23ರಂದು ವಿಶ್ವನಾಥ್ ಜೀ, ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಅವರಿಗೆ ಕಾನ್ಫರೆನ್ಸ್ ಕರೆ ಮಾಡಿ ಬಿಜೆಪಿಯ ಕೇಂದೀಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದ್ದು ಅವರನ್ನು ಭೇಟಿ ಆಗಿ ಎಂದು ಹೇಳಿದ್ದಾರೆ.
ಈ ಮಾತಿನಂತೆ ಗಗನ್ ಕಡೂರು ಮತ್ತು ಗೋವಿಂದಬಾಬು ಪೂಜಾರಿ ಕುಮಾರ ಕೃಪಾ ಸರ್ಕಾರಿ ಅತಿಥಿ ಗ್ರಹದಲ್ಲಿ ತಂಗಿದ್ದ ಶ್ರೀಕಾಂತ್ ನಾಯ್ಕ್ ಎಂಬವರನ್ನು ಭೇಟಿ ಆದರು. ಈ ವೇಳೆ ಗಗನ್ ಕಡೂರು, ಶ್ರೀಕಾಂತ ನಾಯ್ಕ್ ಅವರನ್ನು ದೆಹಲಿ ಚುನಾವಣಾ ಸಮಿತಿಯ ಸದಸ್ಯ ಎಂದು ಪರಿಚಯಿಸಿದ್ದಾನೆ. ಈ ವೇಳೆ ಶ್ರೀಕಾಂತ ನಾಯ್ಕ್, ಕೇಂದ್ರಿಯ ಚುನಾವಣಾ ಸಮಿತಿ ನಿಮ್ಮ ಹೆಸರು ಅಂತಿಮಗೊಳಿಸಿದೆ ಎಂದು ಗೋವಿಂದಬಾಬು ಪೂಜಾರಿಗೆ ಹೇಳಿದ್ದಾರೆ. ನಂತರ ಬಾಕಿ ಮೊತ್ತ 3 ಮೂರು ಕೋಟಿ ರೂ. ಗಗನ್ ಕಡೂರ್ ರವರು ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಸೂಚಿಸಿದರು.
ನಂತರ ಶ್ರೀಕಾಂತ್ ನಾಯ್ಕ್ ಮತ್ತು ವಿಶ್ವನಾಥ್ ಜಿ ಸೂಚನೆಯಂತೆ 3 ಕೋಟಿ ರೂ. ಮೊತ್ತವನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ 2022ರ ಡಿಸೆಂಬರ್ 29 ರಂದು ಮಂಗಳೂರಿನಲ್ಲಿ ನೀಡಿದ್ದಾರೆ. ನಂತರ ಗಗನ್ ಕಡೂರ್, ಗೋವಿಂದಬಾಬು ಪೂಜಾರಿಗೆ ಕರೆ ಮಾಡಿ ವಿಶ್ವನಾಥ್ ಜಿ ಅವರು ಇದೇ ವರ್ಷ ಮಾರ್ಚ್ 3 ರಂದು ಬೆಳಿಗ್ಗೆ 11.30ರ ಸುಮಾರಿಗೆ ವಿಶ್ವನಾಥ್ ಜಿ. ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾನೆ.
ಇದರಿಂದ ಅನುಮಾನಗೊಂಡ ಗೋವಿಂದಬಾಬು ಪೂಜಾರಿ ವಿಶ್ವನಾಥ್ ಜೀ ಸಾವಿನ ಸುದ್ದಿ ಬಗ್ಗೆ ತಿಳಿಯಲು ಕಾಶ್ಮೀರದಲ್ಲಿರುವ ತಮ್ಮ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬುವವರನ್ನು ವಿಚಾರಿಸಿದಾಗ ವಿಶ್ವನಾಥ್ ಜೀ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಅನುಮಾನ ದಟ್ಟವಾಗಿದೆ. ಕೂಡಲೇ ಗೋವಿಂದಬಾಬು, ಚೈತ್ರಾ ಕುಂದಾಪರ ಹಾಗೂ ಗಗನ್ ಕಡೂರುಗೆ ಕರೆ ಮಾಡಿ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡು ಚರ್ಚಿಸಿದಾಗ ತಾವು ಪಡೆದ ಹಣ ವಿಶ್ವನಾಥ ಜೇ ಬಳಿ ಇದ್ದು, ಅವರೀಗ ವಿಧಿವಶರಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ನಂಬದ ಗೋವಿಂದಬಾಬು ಅವರು ಎಲ್ಲ ನಾಟಕ ನನಗೆ ಗೊತ್ತಾಗಿದೆ, ಹಣವನ್ನು ವಾಪಸ್ ನೀಡಿ, ಇಲ್ಲ ದೂರು ನೀಡುತ್ತೇನೆ ಎಂದಿದ್ದಾರೆ. ಅದಕ್ಕೆ ಚೈತ್ರಾ ಕುಂದಾಪುರ ವಿಷದ ಬಾಟಲೆ ತೋರಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬಾಕ್ ಮೇಲ್ ಮಾಡಿ ಸ್ವಲ್ಪ ಕಾಲಾವಕಾಶ ನೀಡಿ ಎಂದು ಇಬ್ಬರೂ ಹೇಳಿದ್ದಾರೆ. ಅನಂತರ ಇಬ್ಬರೂ ಫೋನ್ ಕರೆ ಸ್ವೀಕರಿಸದೆ ತಲೆ ಮರೆಸಿಕೊಂಡಿದ್ದರು.
ಇದಾದ ಬಳಿಕ ಗೋವಿಂದಬಾಬು ಅಭಿನವ ಪಾಲಶ್ರೀ ಸ್ವಾಮೀಜಿ ಅವರನ್ನು ಭೇಟಿಯಾಗಿ 1.5 ಕೋಟಿ ರೂ. ಹಣ ನೀಡುವಂತೆ ಹೇಳಿದ್ದಾರೆ. ಆಗ ಸ್ವಾಮೀಜಿ ಒಂದು ತಿಂಗಳೊಳಗೆ ವಾಪಸ್ ನೀಡುತ್ತೇನೆ ಈ ವಿಚಾರದಲ್ಲಿ ನನ್ನನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಬಳಿಕ ಗೋವಿಂದಬಾಬು, ವಿಶ್ವನಾಥ್ ಜೀ ಬಗ್ಗೆ ಚಿಕ್ಕಮಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಮಂಜು ಬಳಿ ಹೇಳಿದಾಗ ಮಂಜು ತಾನು ಕೆಲ ದಿನಗಳ ಹಿಂದೆ ಸಲೂನ್ ಒಂದಕ್ಕೆ ಭೇಟಿ ನೀಡಿದ ವೇಳೆ ನಡೆದ ಸನ್ನಿವೇಶಕ್ಕೂ ಇದಕ್ಕೂ ಸಾಮ್ಯತೆ ಎಂದು ಹೇಳಿದ್ದಾರೆ. ಕಡೂರಿನ ಸಲೂನ್ಗೆ ಮಾಕ್ರಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು ಆರ್ಎಸ್ಎಸ್ ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು.
ಈ ಬಗ್ಗೆ ವಿಚಾರಿಸಿದಾಗ ಮೇಕಪ್ ಮಾಡಲು ಬಂದಿದ್ದವರು ಧನರಾಜ್ ಹಾಗೂ ರಮೇಶ್ ಎಂಬ ವ್ಯಕ್ತಿಗಳೆಂದು ತಿಳಿಯಿತು. ಅವರನ್ನು ಪತ್ತೆ ಮಾಡಿದಾಗ ರಮೇಶ ಎಂಬಾತನೇ ಆರ್ಎಸ್ಎಸ್ ಪ್ರಚಾರಕ ವಿಶ್ವನಾಥ್ ಜಿ. ಹೆಸರಲಿ ನಟಿಸಿರುವ ಸಂಗತಿ ಗೋವಿಂದಬಾಬುಗೆ ತಿಳಿದಿದೆ. ಆರ್ಎಸ್ಎಸ್ ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ಆತನಿಗೆ ತರಬೇತಿ ನೀಡಿ 1.20 ಲಕ್ಷ ರೂ. ಕೊಟ್ಟಿದ್ದಾರೆ. ಈ ನಾಟಕವಾಡುವಾಗ ಆರೆಸೆಸ್ಸ್ ವಾಹನವಾಗಿ ಬಳಸಲು 2.5 ಲಕ್ಷ ರೂ. ನೀಡಿದ್ದಾರೆ ಎಂದು ಧನರಾಜ್ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ಶ್ರೀಕಾಂತ್ ನಾಯ್ಕ್ ಎಂಬ ವ್ಯಕ್ತಿ ಬಗೆ ಧನರಾಜ್ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಗಿದೆ. ಶ್ರೀಕಾಂತ್ ನಾಯ್ಕ್ರನ್ನು ಭೇಟಿಯಾಗಿ ವಿಚಾರಿಸಿದಾಗ ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93 ಸಾವಿರ ರೂ. ನೀಡಿದ್ದಾರೆ. ಅಲ್ಲದೇ ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರ ಕುಂದಾಪುರ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾನೆ ಎಂದು ಎಫ್ಐಆರ್ ದಾಖಲಾಗಿದೆ.