ಉಪ್ಪಿನಂಗಡಿ: ನಿಯತ್ತಿಗೆ ಇನ್ನೊಂದು ಹೆಸರು ನಾಯಿ ಅನ್ನೋ ಮಾತಿದೆ. ತನಗೆ ಅನ್ನ ಹಾಕಿದವರನ್ನು ಅದು ಯಾವತ್ತೂ ಮರೆಲಯಲ್ಲ. ಇಲ್ಲೊಂದು ನಾಯಿ ತನಗೆ ಪ್ರತಿ ದಿನ ಅನ್ನ ಹಾಕಿ ಸಲಹುತ್ತಿದ್ದ ಮಾಲಕಿಯ ಜೀವ ಉಳಿಸಿದೆ.
ಅಂದ್ಹಾಗೆ ಇಂತಹದ್ದೊಂದು ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು ಉಪ್ಪಿನಂಗಡಿ ಬಳಿಯ ಪಿಲಿಗೂಡು. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮನೆ ಮಾಲಕಿಯನ್ನು ರಕ್ಷಿಸಿದೆ. ಬೆಂಗಳೂರು ಮೂಲದ ಈ ಮಹಿಳೆ ಉಪ್ಪಿನಂಗಡಿ ಮೂಲಕ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು.ಬಳಿಕ ಉಪ್ಪಿನಂಗಡಿಗೆ ಬಂದು ಪತಿಗೆ ದೊರಕಿದ ಪಿತ್ರಾರ್ಜಿತ ಆಸ್ತಿಯಲ್ಲಿ ವರ್ಷದ ಹಿಂದೆ ಮನೆ ಕಟ್ಟಿಕೊಂಡು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಅದುವರೆಗೆ 15 ವರ್ಷ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಕೆಲವು ದಿನಗಳಿಂದ ಮೆಕ್ಯಾನಿಕ್ ಆಗಿರುವ ಮಹಿಳೆಯ ಪತಿ ಹಾಗೂ ಆಕೆಯ ಮಧ್ಯೆ ವಿರಸ ಮೂಡಿದೆ. ಇದೇ ವಿಚಾರಕ್ಕೆ ಮನನೊಂದ ಮಹಿಳೆ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ರಾತ್ರಿ ನಡೆದುಕೊಂಡೇ 4 ಕಿ.ಮೀ.ದೂರದ ನೇತ್ರಾವತಿ ಸೇತುವೆಗೆ ಬಂದು ನದಿಗೆ ಹಾರಲು ಯತ್ನಿಸುತ್ತಿದ್ದಾರೆ. ಆದರೆ ಅವರನ್ನು ಮನೆಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಅಪಾಯ ವನ್ನು ಅರಿತು ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳುತ್ತಾ ರಸ್ತೆಯಲ್ಲಿ ಹೋಗುತ್ತಿರುವವರ ಗಮನ ಸೆಳೆಯಲು ಪ್ರಯತ್ನಿಸಿದೆ. ಇದೇ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವರು ಇದನ್ನು ಕಂಡು ಪರಿಚಯದ ಸಮಾಜ ಸೇವಕರೋರ್ವರ ಮೂಲಕ ಇನ್ನೇನು ನದಿಗೆ ಹಾರುವಂತಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.
ಘಟನೆ ಬಳಿಕ ಮಹಿಳೆ ತನ್ನ ಮನೆಗೆ ಹೋಗಲು ಒಪ್ಪಿಲ್ಲ.ಮನೆಗೆ ಹೋಗಲಾರೆ ಎಂದು ಪಟ್ಟು ಹಿಡಿದು ಕುಳಿತಿದ್ದರು.
ಶುಕ್ರವಾರ ದಿನವಿಡೀ ರಾಜೀ ಮಾತುಕತೆ ನಡೆಯಿತಾದರೂ ಮಹಿಳೆ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದಾರೆ. ಪೊಲೀಸರು ಮತ್ತು ಸ್ಥಳೀಯರು ಮನವೊಲಿಕೆಗೆ ಸಾಕಷ್ಟು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. ಸದ್ಯ ಅವರ ಗೆಳತಿಯ ಮನೆಯಲ್ಲಿದ್ದು, ಶನಿವಾರ ಬೆಂಗಳೂರಿನ ತಾಯಿ ಮನೆಯಿಂದ ಕರೆದೊಯ್ಯಲು ಬರುವುದಾಗಿ ತಿಳಿದುಬಂದಿದೆ. ಇಬ್ಬರು ಮಕ್ಕಳು ಅಪ್ಪನೊಂದಿಗೆ ಇರುವುದಾಗಿ ತಿಳಿಸಿದ್ದಾರೆ.