ಬೆಳ್ತಂಗಡಿ : ಪ್ರವಾಸಿ ಮಂದಿರದ ಕಟ್ಟಡ ನಿರ್ಮಾಣದ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಸರಕಾರಕ್ಕೆ ಎಸ್.ಐ.ಟಿ ತನಿಖೆ ನಡೆಸಲು ದೂರು ನೀಡಿದ್ದು ಅದರಂತೆ ಇದೀಗ ಸರಕಾರ ಧಾರವಾಡದ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಇಂಜಿನಿಯರ್ ಗೆ ವರದಿ/ ದಾಖಲೆ ನೀಡಲು ಸರಕಾರದ ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿ ಮುರಳೀಧರ ಎಸ್ ತಳ್ಳಿಕೇರಿ ಪತ್ರ ಬರೆದಿದ್ದಾರೆ.

ಪತ್ರದಲ್ಲಿರುವ ವಿವರ: ಉಲ್ಲೇಖಿತ(1)ರ ನಡವಳಿಯಲ್ಲಿ ಮಾನ್ಯ ಗೃಹ ಸಚಿವರು ಶ್ರೀ ರಕ್ಷಿತ್ ಶಿವರಾಂ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ 2023ರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಸಂತೆಕಟ್ಟೆ, ಬೆಳ್ತಂಗಡಿ ಇವರುಗಳು ಮಂಗಳೂರು ವಿಭಾಗದ ಬೆಳ್ತಂಗಡಿ ಉಪವಿಭಾಗದ ವ್ಯಾಪ್ತಿಯಲ್ಲಿ ಬೆಳ್ತಂಗಡಿ ಪ್ರವಾಸಿ ಮಂದಿರದ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಸದರಿ ಪ್ರಕರಣದಲ್ಲಿ ಬಾಗಿಯಾಗಿರುವಂತಹ ಮುಖ್ಯ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ವಿಭಾಗ, ಮಂಗಳೂರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಉಪವಿಭಾಗ, ಬೆಳ್ತಂಗಡಿ ಮತ್ತು M/S BIMAL INFRA CONSTRUCTION PVT LTD MUDABIDRE, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರೊಂದಿಗೆ ಸೇರಿ ಮಾಡಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸಲ್ಲಿಸಿರುವ ದೂರಿನನ್ವಯ ಸದರಿ ಪ್ರಕರಣದ ಕುರಿತು ಇಲಾಖೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಮೂಲಕ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಕೋರಿರುವ ಮೇರೆಗೆ ಉಲ್ಲೇಖಿತ(2)ರ ಟಿಪ್ಪಣಿಯನ್ವಯ ಮಾನ್ಯ ಲೋಕೋಪಯೋಗಿ ಸಚಿವರು ಸದರಿ ದೂರಿನ ಕುರಿತು ಕೂಲಂಕಷವಾಗಿ ಪರಿಶೀಲಿಸಿ, ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿರುತ್ತಾರೆ. (ಪ್ರತಿ ಲಗತ್ತಿಸಿದೆ).ಸದರಿ ದೂರಿನಲ್ಲಿನ ಅಂಶಗಳನ್ನು ಪರಿಶೀಲಿಸುವ ಅಗತ್ಯ ಕ್ರಮ ಕೈಗೊಂಡು ಕಾಮಗಾರಿ ನಡೆದ ಸ್ಥಳ ಪರಿವೀಕ್ಷಣೆ ಮಾಡಿ ಸದರಿ ಪ್ರಕರಣಕ ಕುರಿತು ಸತ್ಯಾಸತ್ಯೆತೆಗಳನ್ನೊಳಗೊಂಡ ಒಂದು ವಸ್ತುನಿಷ್ಠೆ ವರದಿಯನ್ನು ಹಾಗೂ ಆರೋಪ ಸಾಬೀತಾದಲ್ಲಿ ಸದರಿ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಎಲ್ಲಾ ಅಧಿಕಾರಿ/ನೌಕರರುಗಳ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವ ಸಂಬಂಧ ಸೂಕ್ತ ಪ್ರಸ್ತಾವನೆಯೊಂದಿಗೆ ಪೂರಕ ದಾಖಲೆಗಳನ್ನು/ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ತಮನ್ನು ಕೋರಲು ನಾನು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು (ಮುರಳೀಧರ, ಎಸ್. ತಳ್ಳಿಕೇರಿ) ಸರ್ಕಾರದ ಅಧೀನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ (ಸೇವೆಗಳು – ಸಿ) ಇವರು ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು(ಉತ್ತರ) ಧಾರವಾಡ ಇವರಿಗೆ 29/10/2024 ರಂದು ಪತ್ರ ಬರೆದಿದ್ದಾರೆ.