ಬಂಟ್ವಾಳ : ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ.) ಕಂದೂರು ಹಾಗೂ ಬಂಟ್ವಾಳ ಮಡಿವಾಳ ಯುವ ಬಳಗ ಮತ್ತು ಬಂಟ್ವಾಳ ಮಹಿಳಾ ಘಟಕ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ (ರಿ.) ಮಂಗಳೂರು ಇವರ ಸಹಕಾರದೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಡಿವಾಳ ಸಮಾಜ ಬಾಂಧವರಿಗೆ ಆಗಸ್ಟ್ 11ರಂದು ಬೆಳಗ್ಗೆ 8 ಗಂಟೆಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರ ಬಳಿಯ ಕೆಸರು ಗದ್ದೆಯಲ್ಲಿ ಕೆಸರ್ಡೊಂಜಿ ದಿನ -2024 ಕಾರ್ಯಕ್ರಮ ನಡೆಯಲಿದ್ದು, ಮೂರು ಜಿಲ್ಲೆಯಿಂದ ಸುಮಾರು 2000 ಮಡಿವಾಳ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಕರಿಂಜೆ ಪರಮ ಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಸಾಧನೆ ಮಾಡಿದ ಭಾರತೀಯ ಭೂಸೇನೆಯ ನಿವೃತ್ತ ಸುಬೇದಾರ್ ಜೂನಿಯರ್ ಕಮಿಷನರ್ ಆಫೀಸರ್ ಉಮೇಶ್ ಸಾಲಿಯಾನ್ ಹಿರಿಯಡ್ಕ, ಚಿತ್ರ ನಟ ಕಾಂತಾರ ಖ್ಯಾತಿಯ ಶನಿಲ್ಗುರು ಬಂಟ್ವಾಳ, ಅಂತಾರಾಷ್ಟ್ರೀಯ ಮಟ್ಟದ ಭಾಸ್ಕೆಟ್ಬಾಲ್ ಕ್ರೀಡಾಪಡು ಸಂಕೇತ್ ಎಸ್. ಹೊಸಬೆಟ್ಟುರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಸಭಾಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ. ಎನ್. ಪ್ರಕಾಶ್ ವಹಿಸಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 40 ಗಣ್ಯರು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಮಾಜ ಬಾಂಧವರ ಸಂಘಟನೆ, ಮತ್ತು ತುಳುನಾಡಿನ ಪರಂಪರೆ , ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದಾಗಿದೆ.