ಮಂಗಳೂರು: ಹೊಸ ವರ್ಷವನ್ನು ಸಾರ್ವಜನಿಕರು ಸುರಕ್ಷತೆ ಹಾಗೂ ಭದ್ರತೆಯೊಂದಿಗೆ ಆಚರಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೂಕ್ತ ರೀತಿಯ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಶನಿವಾರದಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಚರ್ಚ್, ಹೊಟೇಲ್, ರೆಸ್ಟೋರೆಂಟ್, ಖಾಸಗಿ ಸಭಾಂಗಣ ಸೇರಿದಂತೆ ಒಳಾಂಗಣಗಳಲ್ಲಿ ಕಾರ್ಯಕ್ರಮ ನಡೆಸಲು ಕೋರಿ 36 ಅರ್ಜಿಗಳು ಬಂದಿದ್ದು, ಅನೇಕ ನಿಬಂಧನೆಗಳೊಂದಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದ್ದು, ಒಳಾಂಗಣದಲ್ಲಿ ಕಾರ್ಯಕ್ರಮ ನಡೆಸುವವರು ಮಧ್ಯರಾತ್ರಿ 12.30ರವರೆಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಪ್ರಯುಕ್ತ ಬೀಚ್ ಅಥವಾ ಇತರೆಡೆ ಹೊರಾಂಗಣಗಳಲ್ಲಿ ಕಾರ್ಯಕ್ರಮ ನಡೆಸುವವರು 10ಕ ಗಂಟೆಗೆ ಮುಕ್ತಾಯಗೊಳಿಸಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ನಿಗಾ ವಹಿಸಲಿದ್ದು, 17 ಹೊಯ್ಸಳ ವಾಹನ ಸೇರಿದಂತೆ 66 ಸೆಕ್ಟರ್ ಮೊಬೈಲ್ ಘಟಕಗಳು ಕಾರ್ಯಾಚರಣೆಯಲ್ಲಿರಲಿವೆ. 106 ಪಾಯಿಂಟ್ಗಳಲ್ಲಿ ಎಸಿಪಿ ದರ್ಜೆಯಿಂದ ಹಿಡಿದು ಅಧಿಕಾರಿ, ಸಿಬ್ಬಂದಿ ಮೇಲ್ವಿಚಾರಣೆ ನಡೆಸಲಿದ್ದಾರೆ.
ಚೆಕ್ಪೋಸ್ಟ್ನಲ್ಲಿ ಸಿವಿಲ್ ಹಾಗೂ ಟ್ರಾಫಿಕ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಸೇರಿದಂತೆ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ವಹಿಸಲಿದ್ದಾರೆ. ಡ್ರಗ್ಸ್ ವಿರುದ್ಧವೂ ನಾಲ್ಕು ತಂಡಗಳು ಕಾರ್ಯಪ್ರವೃತ್ತವಾಗಿದ್ದು, ಸೇವನೆ ಮತ್ತು ಸಾಗಾಟ- ಮಾರಾಟದ ಮೇಲೆ ನಿಗಾ ವಹಿಸಲಿದ್ದಾರೆ ಎಂದರು.
ಬೀಚ್ಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಮುಂಜಾಗೃತಾ ಕ್ರಮಗಳ ಜತೆಗೆ ಲೈಟಿಂಗ್ ವ್ಯವಸ್ಥೆಗೂ ಕ್ರಮ ವಹಿಸಲಾಗಿದೆ. 112 ಸೇರಿದಂತೆ ಸ್ಥಳೀಯ ಅಧಿಕಾರಿಗಳು ನೇರವಾಗಿ ಸಂಪರ್ಕಕ್ಕೆ ಸಹಕಾರಿ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ಅವರು ವಿವರ ನೀಡಿದರು. ಸುದ್ದಿಗೋಷ್ಟಿಯಲ್ಲಿ ಡಿಸಿಪಿಗಳಾದ ದಿನೇಶ್ ಕುಮಾರ್, ಸಿದ್ಧಾರ್ಥ್ ಗೋಯಲ್ ಉಪಸ್ಥಿತರಿದ್ದರು.