ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಮುಸಲ್ಮಾನ ಬಾಂಧವರು ಸರಳವಾಗಿ ಬಕ್ರೀದ್ ಹಬ್ಬ ಆಚರಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಗ್ಗೆ 6:30ಕ್ಕೆ ಕೆಲವು ಮಸೀದಿಗಳಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಆರಂಭಗೊಂಡಿದೆ. ಕಳೆದ ಬಾರಿಯೂ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಕೆಲವೊಂದು ನಿರ್ಬಂಧ ಹೇರಿದ್ದರಿಂದ ಹಬ್ಬದ ಸಂಭ್ರಮವಿರಲಿಲ್ಲ. ಆದರೆ ಈ ಬಾರಿ ಹೊಸ ಮಾರ್ಗಸೂಚಿಯನ್ನು ಪಾಲಿಸುವುದರೊಂದಿಗೆ ತುಸು ಸಂಭ್ರಮ ಕಂಡು ಬಂತು.
ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಝ್, ಈದ್ ಖುತ್ಬಾ ನೆರವೇರಿಸಬೇಕು ಎಂದು ರಾಜ್ಯ ಸರಕಾರ ಸೂಚಿಸಿದ ಮೇರೆಗೆ ಎಲ್ಲಾ ಮಸೀದಿಗಳಲ್ಲಿ ಅದನ್ನು ಪಾಲಿಸಲಾಯಿತು.
65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ಪ್ರವೇಶಿರಲಿಲ್ಲ. ಉಳಿದಂತೆ ಮಸೀದಿಗೆ ಪ್ರವೇಶಿಸುವ ಮುನ್ನ ಎಲ್ಲರ ದೇಹದ ತಾಪಮಾನ ತಪಾಸಣೆ ಮಾಡಲಾಗಿತ್ತು. ಕೈಗಳನ್ನು ಸ್ಯಾನಿಟೈಝರ್ನಿಂದ ಶುಚಿಗೊಳಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಸ್ಕನ್ನು ಧರಿಸಿದ್ದರು. ನಮಾಝ್ ವೇಳೆ ಸುರಕ್ಷಿತ ಅಂತರವನ್ನು ಕಾಪಾಡಲಾಗಿತ್ತು. ಮನೆಯಿಂದ ಕೊಂಡೊಯ್ದ ಮುಸಲ್ಲಾ ಹಾಸಿ ನಮಾಝ್ ನಿರ್ವಹಿಸಲಾಯಿತು. ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶವಿರಲಿಲ್ಲ.
ಸರಕಾರದ ಸೂಚನೆಯ ಮೇರೆಗೆ ಮಸೀದಿ ಹೊರತುಪಡಿಸಿ ಯಾವುದೇ ಈದ್ಗಾಗಳಲ್ಲಿ ನಮಾಝ್ ನಿರ್ವಹಿಸಲಿಲ್ಲ. ಸಾಮಾನ್ಯವಾಗಿ ನಗರದ ಈದ್ಗಾ ಜುಮಾ ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸಲಾಗುತ್ತಿತ್ತು. ಆದರೆ ಈ ಬಾರಿ ಈದ್ಗಾದಲ್ಲಿ ಸ್ಥಳೀಯರಷ್ಟೇ ನಮಾಝ್ ನಿರ್ವಹಿಸಿದರು. .
ಕರಾವಳಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಬಕ್ರೀದ್ ಆಚರಣೆ:ಮಸೀದಿಗಳಲ್ಲಿ ಪ್ರಾರ್ಥನೆ !!
- Advertisement -
- Advertisement -
- Advertisement -
