ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಗುಂಪಕಲ್ಲು -ತೆಂಕುಬೈಲು ಕಾಡಿನಲ್ಲಿ 500 ವರ್ಷ ಗಳಿಗಿಂತಲೂ ಹಳೆಯದಾಗಿರಬಹುದು ಎನ್ನಬಹುದಾದ ಕಲ್ಲಿನ ಕಟ್ಟೆಯೊಂದು ಸ್ಥಳೀಯರ ಕಣ್ಣಿಗೆ ಗೋಚರವಾಗಿದೆ. 6 ಅಡಿ ಉದ್ದ ಹಾಗು 3 ಅಡಿಯಷ್ಟು ಅಗಲ ಇರುವ ಕಟ್ಟೆ ಇದಾಗಿದ್ದು ಕಟ್ಟೆಯ ಮೇಲೆ ಹೋಗಲು ಮೆಟ್ಟಿಲಿನ ವ್ಯವಸ್ಥೆ ಇರುವಂತೆ ಕುರುಹು ಪತ್ತೆಯಾಗಿದೆ.
![](https://mahaxpress.com/wp-content/uploads/2024/05/WhatsApp-Image-2024-05-30-at-09.34.04_e812f842-1024x461.jpg)
ಇತ್ತೀಚೆಗೆ ಇಲ್ಲಿನ ರಕ್ತೇಶ್ವರಿ ಗುಡ್ಡೆಯಲ್ಲಿ ರಕ್ತೇಶ್ವರಿ ದೇವಿ, ಬ್ರಹ್ಮ ರಕ್ಕಸನ ಪ್ರತಿಷ್ಟಾಪನೆ ನಡೆದಿತ್ತು. ಇದೀಗ ಈ ಜಾಗದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಕಾಡಿನ ಒಳಗೆ, ಸ್ಥಳೀಯರಾದ ಗಣೇಶ್ ಗೌಡ ಕಲಾಯಿ, ಸೀತಾರಾಮ ನರಿಮೊಗರು, ಸೇಸಪ್ಪ ಗೌಡ ತೆಂಕುಬೈಲು, ಪುರಂದರ ಗೌಡ ತೆಂಕುಬೈಲುರವರು ಉಪ್ಪಾರಹಳ್ಳದ ಕಡೆ ಹೋಗುವಾಗ ದಾರಿಯಲ್ಲಿ ಈ ಕಟ್ಟೆ ಗೋಚರವಾಗಿದೆ. ಊರ ಹಿರಿಯರ ಪ್ರಕಾರ ಇದು ಸುಮಾರು 500 ವರ್ಷಗಳ ಹಿಂದೆ ಈ ಕಟ್ಟೆ ಮಾಡಿದ್ದಿರಬಹುದು ಎಂದು ಹೇಳಲಾಗುತ್ತಿದೆ.
![](https://mahaxpress.com/wp-content/uploads/2024/05/WhatsApp-Image-2024-05-30-at-09.34.05_484af915-1024x461.jpg)
ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು: ಕೆಲ ಸಮಯಗಳ ಹಿಂದೆ ರಕ್ತೇಶ್ವರಿ ಗುಡ್ಡೆಯಲ್ಲಿ ದೈವಗಳನ್ನು ಪ್ರತಿಷ್ಠಾಪಿಸುವ ಸಂದರ್ಭ, ಜ್ಯೋತಿಷಿಗಳು ಸ್ಥಳೀಯವಾಗಿ ಸಂಬಂಧಪಟ್ಟಂತೆ ಬೇರೆ ಕಟ್ಟೆಗಳು ಕೂಡ ಗೋಚರಿಸಲಿವೆ ಎಂದು ತಿಳಿಸಿದ್ದರು. ಅಲ್ಲದೆ ಗ್ರಾಮ ಹಾಗೂ ಸೀಮೆಯ ದೇವರಾದ ಶ್ರೀ ವೈದ್ಯನಾತೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೂ ಆ ಕಟ್ಟೆಗಳಿಗೂ ಸಂಬಂಧ ಇರಲಿವೆ ಎಂದು ಸೂಕ್ಷ್ಮವಾಗಿ ತಿಳಿಸಿದ್ದರು. ಇದೀಗ ಗುಂಪಕಲ್ಲು – ತೆಂಕುಬೈಲು ಪರಿಸರದಲ್ಲಿ ಕಂಡುಬಂದಿರುವ ಕಟ್ಟೆ ದೈವ ದೇವರುಗಳಿಗೆ ಸಂಬಂಧ ಪಟ್ಟದ್ದು ಇರಬಹುದೇ ಎಂದು ಊರ ಆಸ್ತಿಕ ವಲಯದಲ್ಲಿ ಚರ್ಚೆಯಾಗುತ್ತಿದೆ