ಕುಂದಾಪುರ: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಕ್ಷಣಕ್ಕೊಮ್ಮೆ ಹೆಚ್ಚಗುತ್ತಿದ್ದು, ಈ ನಿಟ್ಟಿನಲ್ಲಿ ಕುಂದಾಪುರ ತಾಲೂಕಿನ ಕಟ್ಬೆಲ್ತೂರು ಗ್ರಾಮದ ಬಗ್ವಾಡಿಯಲ್ಲಿ ಹೊರಗಿನಿಂದ ಯಾವುದೇ ವ್ಯಕ್ತಿ ತಮ್ಮ ಊರಿಗೆ ಬರದಂತೆ ಪ್ರವೇಶ ದ್ವಾರದಲ್ಲಿಯೇ ಗೇಟು ನಿರ್ಮಿಸಿದ ಘಟನೆ ನಡೆದಿದೆ.
ಕಳೆದ 3-4 ದಿನಗಳಿಂದ ತಮ್ಮ ಸುತ್ತಮುತ್ತಲಿನ ಊರಿಗೆ ಬೆಂಗಳೂರು ಮತ್ತಿತರ ಪ್ರದೇಶಗಳಲ್ಲಿ ಕೆಲಸಕ್ಕಿದ್ದ ಜನ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದ ಎಲ್ಲಿ ತಮ್ಮ ಊರಿಗೂ ಕೋವಿಡ್ 19 ರೋಗ ಹಬ್ಬುತ್ತದೋ ಎಂದು ಊರವರೆಲ್ಲ ಭಯಭೀತಗೊಂಡಿದ್ದಾರೆ.
ಹೊರಗಿನಿಂದ ಬಂದವರು ತಮ್ಮ ಊರಿಗೂ ಈ ಮಹಾಮಾರಿ ರೋಗವನ್ನು ಹರಡುವ ಸಾಧ್ಯತೆ ಇದೆ ಎನ್ನುವ ಭೀತಿಯಲ್ಲಿ ಈಗ ಬಗ್ವಾಡಿಯ ಗ್ರಾಮಸ್ಥರೆಲ್ಲ ಒಗ್ಗೂಡಿ, ತಮ್ಮ ಊರಿಗೆ ಯಾರು ಬರದಂತೆ ” ಕೋವಿಡ್ 19 ಜಾಗೃತಿ ತಾತ್ಕಲಿಕ ಪ್ರವೇಶ ನಿಷೇಧ ಸಹಕರಿಸಿ, ಬಗ್ವಾಡಿ ಗ್ರಾಮಸ್ಥರು’ ಎನ್ನುವುದಾಗಿ ಊರಿಗೆ ಪ್ರವೇಶವಾಗುವ ದಾರಿಯಲ್ಲಿ ಬೋರ್ಡ್ ಹಾಕಲಾಗಿದೆ. ಜತೆಗೆ ಯಾರೂ ಪ್ರವೇಶಿಸದಂತೆ ಹಾಗೂ ಊರಿಂದ ಕೋವಿಡ್ 19 ಭೀತಿ ಕಡಿಮೆಯಾಗುವವರೆಗೆ ಹೊರ ಹೊಗದಂತೆ ಗೇಟು ಕೂಡ ಹಾಕಲಾಗಿದೆ.
