ಪುತ್ತೂರು : ಇಡೀ ಜಗತ್ತನ್ನೇ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ನಾಗರಿಕ ಸಮಾಜವನ್ನೇ ದಂಗುಬಡಿಸಿದೆ. ಮನುಷ್ಯ ಪ್ರಯತ್ನಗಳು ಸಾಗುತ್ತಿರುವ ನಡುವೆಯೇ ಅಂತಿಮವಾಗಿ ದೇವರ ಮೇಲೆ ಭಾರ ಹಾಕುವುದೊಂದೇ ಉಳಿದಿರುವ ಮಾರ್ಗವಾಗಿದೆ. ಲಕ್ಷಾಂತರ ಜನರ ಕಾಯಿಲೆ, ಕೋಟಲೆಗಳನ್ನು ದೂರ ಮಾಡಿರುವ ಮಹಾ ಮಾತೆ ದೇಯಿ ಬೈದ್ಯೆತಿ ಈ ಕೊರೊನಾ ಮಾರಿಯನ್ನು ದೂರ ಮಾಡಲೆಂಬುದೇ ಭಕ್ತ ಕುಲಕೋಟಿಯ ಆಶಯ. ಈ ಹಿನ್ನೆಲೆಯಲ್ಲಿ ಮಾಚ್೯ 16ರಂದು ಸೋಮವಾರ ಮಾತೆ ದೇಯಿ ಬೈದ್ಯೆತಿ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಅಪೂರ್ವ ಶತೌಷಧಿ ದ್ರವ್ಯ ಕಳಶಾಭಿಷೇಕ ಮಹಾಮಾತೆಗೆ ಕ್ಷೇತ್ರದ ತಂತ್ರಿಗಳಾದ ಶ್ರಿ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಮುಂಜಾನೆಯಿಂದಲೇ ಈ ಅಪೂರ್ವ ಕಲಶಾಭಿಷೇಕ ಆರಂಭಗೊಳ್ಳಲಿದೆ. ನೂರು ಬಗೆಯ ಔಷಧೀಯ ಗಿಡಮೂಲಿಕೆಗಳ ದ್ರವ್ಯಗಳನ್ನು ಓಷಧಿ ಸೂಕ್ತದಿಂದ ಅಭಿಮಂತ್ರಿಸಿ, ಪವಮಾನ ಹೋಮ, ಧನ್ವಂತರಿ ಹೋಮ ಸಹಿತವಾಗಿ ಕಲಶಾಭಿಷೇಕ ನಡೆಯಲಿದೆ. ಪ್ರಸನ್ನ ಕಾಲದಲ್ಲಿ ಮಾತೆಯ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಅಪೂರ್ವ ಶತೌಷಧಿ ದ್ರವ್ಯ ಕಲಶಾಭಿಷೇಕದ ಫಲವಾಗಿ ಮಾತೆಯ ಪೂರ್ಣ ಅನುಗ್ರಹ ಲೋಕಕ್ಜೆ ಸಿಗಲಿ, ಜಗತ್ತು ಕೊರೋನಾ ಮುಕ್ತವಾಗಲಿ ಎಂದು ಕ್ಷೇತ್ರದ ಯಜಮಾನರಾದ ಶ್ರೀ ಜಯಂತ ನಡುಬೈಲ್ ಅವರು ಪ್ರಕಟಣೆಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
