ನಾಡಿನ ಅತಿ ಪವಿತ್ರ ಮತ್ತು ಪುಣ್ಯಕ್ಷೇತ್ರದಲ್ಲಿ ಒಂದಾದ ಧರ್ಮಸ್ಥಳದಲ್ಲಿ ನಂದಾ ದೀಪ ಆರಿ ಹೋಗಿದೆ ಎಂಬ ಸುಳ್ಳು ವದಂತಿಯಿಂದ ಜನ ರಾತ್ರಿಯೆಲ್ಲಾ ಜಾಗರಣೆ ಮಾಡಿ, ದೀಪ ಹಚ್ಚಿದ ಘಟನೆ ನಡೆದಿದೆ. ಕೆಲವು ಕಿಡಿಗೇಡಿಗಳು ಇಂತಹ ಸುಳ್ಳು ಸುದ್ದಿಯನ್ನು ವಾಟ್ಸಾಪ್ ಮುಖಾಂತರ ಹರಿ ಬಿಟ್ಟಿರುವುದರಿದ ದೇವಾಲಯದ ಅಪಾರ ಭಕ್ತರು ರಂಗೋಲಿ ಬಿಡಿಸಿ ರಾತ್ರಿ ಇಡೀ ದೀಪ ಬೆಳಗಿಸಿ ಮಂಜುನಾಥನ ಭಜನೆ ಮಾಡಿರುವ ಘಟನೆ ನಡೆದಿದೆ.
ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಜನರಲ್ಲಿ ಆತಂಕ ಎದುರಾಗಿದೆ. ವದಂತಿ ನಂಬಿದ ಜನ ಕೆಲವು ಜಿಲ್ಲೆಗಳಲ್ಲಿ ಜಾಗರಣೆ ಮಾಡಿದ್ದಾರೆ. ಸುಳ್ಳು ವದಂತಿಯನ್ನು ನಂಬಿ ಮನೆಯಲ್ಲಿ ದೀಪ ಹಚ್ಚಿದ್ದಾರೆ ಎನ್ನಲಾಗಿದೆ. ಮೊದಲೇ ಮಹಾಮಾರಿ ಕೊರೋನಾ ವೈರಸ್ ಆತಂಕದಲ್ಲಿರುವ ಜನ ಗಾಳಿ ಸುದ್ದಿಯನ್ನು ನಂಬಿ ಜಾಗರಣೆ ಮಾಡಿ, ದೀಪ ಹಚ್ಚಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಇದು ಭಕ್ತಾಧಿಗಳ ಭಾವನೆ ಮತ್ತು ನಂಬಿಕಗಳೊಂದಿಗೆ ಕೆಲವು ಕಿಡಿಗೇಡಿಗಳ ಚೆಲ್ಲಾಟವಷ್ಟೇ. ಭಕ್ತಾದಿಗಳು ಇದಕ್ಕೆ ಕಿವಿಗೊಡಬಾರದಾಗಿ ವಿನಂತಿ. ಎಲ್ಲರೂ ಜಗತ್ತಿಗೆ ಕಂಟಕಪ್ರಾಯವಾಗಿರುವ ಕೊರೊನ ವೈರಸ್ನಿಂದ ಮುಕ್ತವಾಗಲು ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸೋಣ ಎಂದು ಭಕ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ.